ಗದಗ ಜಿಲ್ಲೆಯ ರೋಣ ತಾಲೂಕಿನ ಸೋಮನಕಟ್ಟಿ ಗ್ರಾಮದಲ್ಲಿ ನೂತನ ರಥ ನಿರ್ಮಾಣಕ್ಕೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಧಾರ್ಮಿಕ ಕಾರ್ಯಕ್ಕೆ ಸದ್ಬಳಕೆ ಮಾಡಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯಾದ್ಯಂತ ಹಲವಾರು ಮಹಿಳೆಯರು ಹಣ ಪಡೆದ ಫಲಾನುಭವಿಗಳಾಗಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಸೋಮನಕಟ್ಟಿ ಗ್ರಾಮದ ಮಹಿಳೆಯರು ತಾವು ಪಡೆದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಧಾರ್ಮಿಕ ಕಾರ್ಯಕ್ಕೆ ಸದ್ಬಳಕೆ ಮಾಡಲಿಚ್ಚಿಸಿ
ಸೋಮನಕಟ್ಟಿ ಶರಣಬಸವೇಶ್ವರನ ನೂತನ ರಥ ನಿರ್ಮಾಣ ಮಾಡುವ ತೀರ್ಮಾನ ಮಾಡಿದ ಹಿನ್ನೆಲೆ ಯೋಜನೆಯಿಂದ ಬಂದ ಹಣವನ್ನು ದೇಣಿಗೆ ನೀಡಿದ್ದಾರೆ. ಗ್ರಾಮದ ಸುಮಾರು 150ಕ್ಕೂ ಅಧಿಕ ಮಹಿಳೆಯರು ನೂತನ ರಥಕ್ಕೆ ಹಣ ನೀಡಿದ್ದು, ಲಕ್ಷಾಂತರ ರೂ. ಸಂಗ್ರಹವಾಗಿದೆ. ಜೊತೆಗೆ ಗ್ರಾಮದ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳು ಒಂದು ತಿಂಗಳ ಹಣ ನೀಡುವುದಾಗಿ ತೀರ್ಮಾನಿಸಿದ್ದಾರೆ. ಈ ಮೂಲಕ ಪಕ್ಷ, ಜಾತಿ ಬೇಧ ಮರೆತು ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ
ಇದರಿಂದಾಗಿ ಮಹಿಳೆಯರು ತಾವು ಪಡೆದ ಗೃಹಲಕ್ಷ್ಮಿ ಹಣ ನೀಡಿದಕ್ಕೆ ಗ್ರಾಮಸ್ಥರು ಸಂತೋಷಪಟ್ಟಿದ್ದು, ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಗೃಹಿಣಿಯರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ
ಈಗಾಗಲೇ ಬಂದ 11 ತಿಂಗಳ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ, ಸಿಲಿಂಡರ್, ಬಟ್ಟೆ, ಗೃಹೋಪಯೋಗಿ ವಸ್ತುಗಳು ಹಾಗೂ ಬೆಳ್ಳಿ ಬಂಗಾರ ಖರೀದಿಗಾಗಿ ಬಳಕೆ ಮಾಡಿದ್ದಾರೆ. ಒಂದು ತಿಂಗಳ ಹಣವನ್ನು ದೇವರ ಕಾರ್ಯಕ್ಕೆ ನೀಡುವುದಾಗಿ ಮಹಿಳೆಯರು ಹೇಳಿದ್ದಾರೆ