ಶ್ರಾವಣ ಮಾಸದ ಕೊನೆಯ ಸೋಮವಾರದಂದು. ಶ್ರೀ ಪ್ಯಾಟಿ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಸಂಜೆ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಸಂಭ್ರಮದಿಂದ ನೆರವೇರಿತು.
ಗುಡೂರ ಎಸ್ ಸಿ ಗ್ರಾಮದ ಶ್ರೀ ಪ್ಯಾಟಿ ಬಸವೇಶ್ವರ ದೇವಾಲಯದ ರಥೋತ್ಸವವು ಶ್ರಾವಣ ಕಡೆಯ ಸೋಮವಾರದಂದು ಬಹು ವೈಭವ ಪೂರ್ಣವಾಗಿ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಪ್ಯಾಟಿ ಬಸವೇಶ್ವರ ಸ್ವಾಮಿಗೆ ಕುಂಭಾಭಿಷೇಕ, ವಿಶೇಷ ಪೂಜೆ, ಅಭಿಷೇಕ ಜರುಗಿದವು. ಭಕ್ತರು ತೆಂಗಿನಕಾಯಿ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ರಥದ ಕಳಶವನ್ನು ಬೆಳಗ್ಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಬಸವೇಶ್ವರ ದೇವಾಲಯದ ಹತ್ತಿರ ತರಲಾಯಿತು. ಕಳಶ ಆಗಮಿಸುತ್ತಿದ್ದಂತೆ ಭಕ್ತರು ದಾರಿಯುದ್ದಕ್ಕೂ ನೀರು ಹಾಕುತ್ತಾ ಕಳಶಕ್ಕೆ ಹೂಮಾಲೆ ಸಮರ್ಪಿಸಿದರು.
ಸಂಜೆ ವೇಳೆಯಲ್ಲಿ ಕಳಶವನ್ನು ವಾದ್ಯ ಮೇಳ, ಡೊಳ್ಳುಗಳ ನಿನಾದದ ಮಧ್ಯೆ ಮೆರವಣಿಗೆ ಮೂಲಕ ರಥದ ಹತ್ತಿರ ತರಲಾಯಿತು. ಭಕ್ತರೆಲ್ಲರು ಕಳಶದ ಪೂಜೆ ಸಲ್ಲಿಸಿ, ಹೂಮಾಲೆ ಅರ್ಪಿಸಿದರು. ರಥವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು., ರಥೋತ್ಸವ ಜರುಗುವಾಗ ಭಕ್ತರ ಘೋಷಣೆ , ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆಯೂ ರಥಕ್ಕೆ ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸಿದರು.
ಮೈಸೂರು ವಿಜಯಮಹಾಂತೇಶ್ವರ ಸಂಸ್ಥಾನದ ಪರಮಪೂಜ್ಯ ಜಗದ್ಗುರು ಮೈಸೂರು ಶ್ರೀ ವಿಜಯ ಮಹಾಂತ ಸ್ವಾಮಿಗಳು ಕುದರಿಮೋತಿ ಹಾಗೂ ಬಸವಬೆಳವಿಯ ಶ್ರೀ ಚರಮೂರ್ತಿ ಚರಂತೇಶ್ವರ ಮಠದ ಪರಮಪೂಜ್ಯ ಶ್ರೀ ಶರಣಬಸವ ಅಪ್ಪಗಳವರ ಪವಿತ್ರ ಲಿಂಗ ಹಸ್ತದಿಂದ ಶ್ರೀ ಪ್ಯಾಟಿ ಬಸವೇಶ್ವರ ದೇವಾಲಯದ ರಥೋತ್ಸವಕ್ಕೆ ಚಾಲನೆ ನೀಡಿದರು. ಯುವಕರು ಭಕ್ತರು ಬಸವೇಶ್ವರ ಸ್ವಾಮಿಗೆ ಜಯ ಘೋಷಣೆ ಹಾಕುತ ರಥ ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥೋತ್ಸವವು ಶ್ರೀ ಪ್ಯಾಟಿ ಬಸವೇಶ್ವರ ದೇವಾಲಯದಿಂದ ಹೋರಟು ಮುಖ್ಯ ರಸ್ತೆ ಕಾಯಿಪಲ್ಯ ಮಾರುಕಟ್ಟೆ ವಿಜಯ ಮಹಾಂತೇಶ ಬ್ಯಾಂಕ್ ಮಾರ್ಗವಾಗಿ ಪಾದಗಟ್ಟಿ ತಲುಪಿ ಅದೇ ಮಾರ್ಗವಾಗಿ ದೇವಾಲಯದ ಆವರಣದ ಮುಂಭಾಗ ಬಂದು ತಲುಪಿತು.
ರಥೋತ್ಸವ ಸಂಧರ್ಭದಲ್ಲಿ ಶ್ರೀ ಪ್ಯಾಟಿ ಬಸವೇಶ್ವರ ನೂತನ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು., ಶ್ರೀ ವೀರಶೈವ ಸಮಾಜದ ಬಂಧುಗಳು., ಯುವಕರು ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಹಾಗೂ ಇತರರಿದ್ದರು.
ಕಳಶ ಮೆರವಣಿಗೆ :--
ಶ್ರೀ ಪ್ಯಾಟಿ ಬಸವೇಶ್ವರ ದೇವಾಲಯದ ಜಾತ್ರಾ ಮಹೋತ್ಸ ಹಾಗೂ ರಥೋತ್ಸವದ ನಿಮಿತ್ತ ಬೆಳಗಿನ ಜಾವ ಕಳಶದ ಮೆರವಣಿಗೆ ಸಾಗಿತು. ಪೂಜಾರಿ ಮನೆತನದಿಂದ ಪ್ರಾರಂಭಗೊಂಡ ಮೆರವಣಿಗೆ ಕೋಳಿಯವರ ಸಂದಿ., ಲಕ್ಷ್ಮೀ ದೇವಾಲಯ., ಹುಂಚಿಕಟ್ಟಿ., ಕಾಯಿಪಲ್ಯ ಮಾರುಕಟ್ಟೆ., ವಿಜಯ ಮಹಾಂತೇಶ ಬ್ಯಾಂಕ್., ಮುಖ್ಯ ರಸ್ತೆಯ ಮಾರ್ಗವಾಗಿ ಶ್ರೀ ಪ್ಯಾಟಿ ಬಸವೇಶ್ವರ ದೇವಾಲಯ ತಲುಪಿತು.
ವಿದ್ಯುತ್ ಪೂರೈಕೆ :-
ಶ್ರೀ ಪ್ಯಾಟಿ ಬಸವೇಶ್ವರ ದೇವಾಲಯದ ಜಾತ್ರೆಯ ರಥವು ಮುಖ್ಯ ರಸ್ತೆ ಮೂಲಕ ಸಾಗುತ್ತಿದ್ದು ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ವಿದ್ಯುತ್ ಕಂಬಗಳು ಇವೆ. ಆ ಕಂಬಗಳ ವಿದ್ಯುತ್ ತಂತಿಯಿಂದ ರಥೋತ್ಸವಕ್ಕೆ ಯಾವುದೇ ತೊಂದರೆ ಆಗದಂತೆ ಕೆ ಇ ಬಿ ಸಿಬ್ಬಂದಿಗಳು ರಥೋತ್ಸವಕ್ಕೂ ಮನ್ನ ವಿದ್ಯುತ್ ಪೂರೈಕೆ ನಿಲ್ಲಿಸಿ ರಥೋತ್ಸವದ ನಂತರದಲ್ಲಿ ಮತ್ತೆ ವಿದ್ಯುತ್ ತಂತಿಗಳನ್ನು ಜೋಡಿಸಿ ಬಹು ಬೇಗನೆ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.
ನಮ್ಮ ಪ್ರತಿನಿಧಿ - ಶಂಕರ್ ವನಕಿ ಕಮತಗಿ