ಕಮತಗಿ ಪಟ್ಟಣ ಬಾಗಲಕೋಟೆ ತಾಲೂಕಾ ವ್ಯಾಪ್ತಿಗೋ, ಗುಳೇದಗುಡ್ಡ ತಾಲೂಕಾ ವ್ಯಾಪ್ತಿಗೋ ?!
ಕಮತಗಿ: ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುನಗುಂದ ತಾಲೂಕಿನಲ್ಲಿ ಬರುವ ಕಮತಗಿ ಪಟ್ಟಣವನ್ನು ಬಾಗಲಕೋಟೆ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಬಹುಪಾಲು ಸ್ಥಳೀಯರು ಹಾಗೂ ಮುಖಂಡರು ಆಗ್ರಹಿಸಿದ್ದಾರೆ.
ಸೋಮವಾರ ಪಟ್ಟಣಕ್ಕೆ ಆಗಮಿಸಿದ್ದ ಕಂದಾಯ ಇಲಾಖೆಯ ಅಧಿಕಾರಿಗಳ ಪರಿಶೀಲನೆ (ಪಂಚನಾಮೆ) ವೇಳೆ ಈ ಮನವಿಯನ್ನು ಸಲ್ಲಿಸಲಾಯಿತು.
ಕೆಲವು ಮುಖಂಡರು ಬಾಗಲಕೋಟೆ ತಾಲೂಕಿಗೆ ಕೆಲವು ಮುಖಂಡರು ಗುಳೇದಗುಡ್ಡ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಮಾತನಾಡಿದರು
ಇತ್ತೀಚೆಗಷ್ಟೆ ಶಾಸಕ ಎಚ್. ವೈ. ಮೇಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಹುನಗುಂದ ತಾಲೂಕಿನ 20 ನಗರ ಮತ್ತು ಗ್ರಾಮಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡ ತಾಲೂಕುಗಳಿಗೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ಅಧಿಕಾರಿಗಳು ಕಮತಗಿ ಪಟ್ಟಣಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಾಗರಿಕರೊಂದಿಗೆ ನೇರ ಸಂವಾದ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸ್ಥಳೀಯ ಹಿರಿಯರು ಮುಖಂಡರು ಕಮತಗಿ ಪಟ್ಟಣದ ಭೌಗೋಳಿಕ ಹಾಗೂ ಬಾಗಲಕೋಟೆ ನಗರದಿಂದ ದೊರೆಯುವ ನಾನಾ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡರೆ, ಈ ಸೇರ್ಪಡೆ ಅಗತ್ಯವಾಗಿದೆ. ಇದು ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ,” ಎಂದರು.
ಹುನಗುಂದ ತಾಲೂಕಿನಲ್ಲಿ ಬರುವ ಕೆಲವು ಭಾಗಗಳು ಆಡಳಿತಾತ್ಮಕವಾಗಿ ಬಾಗಲಕೋಟೆಯ ಬಳಿಯಲ್ಲಿವೆ ಎಂಬ ಕಾರಣದಿಂದ ಅಲ್ಲಿಗೆ ಸೇರ್ಪಡೆಗೊಳಿಸುವುದು ಸೂಕ್ತವೆಂದು ಸಭೆಯಲ್ಲಿ ಭಾಗವಹಿಸಿದ್ದ ಹಲವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ನಿಂಬಲಗುಂದಿ, ಮುಖ್ಯಾಧಿಕಾರಿ ಎಫ್. ಎನ್. ಹುಲ್ಲಿಕೇರಿ, ಕಂದಾಯ ನಿರೀಕ್ಷಕ ಡಿ. ಎಸ್. ಯತ್ನಟ್ಟಿ, ಗ್ರಾಮ ಆಡಳಿತ ಅಧಿಕಾರಿ ಸಚಿನ, ರಾಠೋಡ, ಪ.ಪಂ. ಸದಸ್ಯರಾದ ದೇವಿಪ್ರಸಾದ ನಿಂಬಲಗುಂದಿ, ಬಸವರಾಜ ಕುಂಬಳಾವತಿ, ಸಂಗಣ್ಣ ಗಾಣಿಗೇರ, ಹುಚ್ಚೇಶ ಮದ್ಲಿ, ಪ್ರಕಾಶ ಶಿನ್ನೂರ, ಮಾಜಿ ಅಧ್ಯಕ್ಷ ಮಹಾಂತೇಶ ಅಂಗಡಿ, ಪಿಕೆಪಿಎಸ್. ಅಧ್ಯಕ್ಷ ಸಿದ್ದು ಹೊಸಮನಿ, ಉಪಾಧ್ಯಕ್ಷ ಕಾಶಪ್ಪ ಲಮಾಣಿ, ಮುಖಂಡರಾದ ಶಂಕರಲಿಂಗಪ್ಪ ಮಂಕಣಿ, ನಬಿ ತಹಶೀಲ್ದಾರ, ಬಾಷಾ ಇಲಕಲ್ಲ, ನಾಗೇಶ ಮುರಾಳ, ರೈತರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.